Monday 9 June 2014

"ಈ ಜನುಮವೆ, ಆಹಾ ದೊರಕಿದೆ ರುಚಿ ಸವಿಯಲು.."!!


  


   ಪಾಪ್ಯುಲರ್ ಸಿನಿಮಾ ರೆಸಿಪಿ ತಮಗೆ ಚೆನ್ನಾಗೇ ಒಲಿದಿದೆ ಅಂತ ಪ್ರೂವ್ ಮಾಡಿದ್ದಾರೆ ಪ್ರಕಾಶ್ ರೈ!
ಅವರ 'ಒಗ್ಗರಣೆ'ಯ ಘಮ ಸದ್ಯಕ್ಕಂತೂ ನನ್ನ ಬಿಡುವಹಾಗೆ ಕಾಣ್ತಿಲ್ಲ!
ಎಲ್ಲೂ ಅತೀ ಬುದ್ಧಿವಂತಿಕೆ ತುರುಕದೆ, ಸಹಜ-ಸರಳ ಸಂತೋಷ ಹುಡುಕಿಕೊಡುವ ಹಾಗೆ, ಜೀವನದ ರುಚಿಯನ್ನೆಲ್ಲ ಸವಿದು ಕಂಡಿರುವ ಎಕ್ಸ್ ಪರ್ಟ್ ಥರ, ನಮ್ಮ ಮುಂದೆ ಅವರ ಪಾಕಪಾತ್ರೆ ಹಿಡಿದು, ಅವರದ್ದೇ ಸ್ಟೈಲಲ್ಲಿ ಜಾಣ ನಗೆ ನಗುತ್ತ, 'ಹಾ,..ಹೇಗಿದೆ?' ಅನ್ನುತ್ತ ಕಣ್ಣು ಮಿಟುಕಿಸಿದ ಹಾಗಿದೆ!!





   ಆತ ಆರ್ಕಿಯಾಲಜಿಸ್ಟ್, ಅವಳು ಡಬ್ಬಿಂಗ್ ಆರ್ಟಿಸ್ಟ್.. ಬದುಕೆಂಬ ಪ್ರೆಷರ್ ಕುಕರಲ್ಲಿ ಹದವಾಗಿ ಬೆಂದಿರುವ ಎರಡು ಜೀವಗಳು! ಆ ಹದಕ್ಕೆ ಬಾಕಿ ಇರೋದಂದ್ರೆ 'ಒಗ್ಗರಣೆ' ಮಾತ್ರ! ಸಂಗಾತಿ ಪಡೆಯಲು ವಯಸ್ಸು ಇನ್ನೇನು ತಮ್ಮ ಕೈಮೀರಿಹೋಗಿಬಿಡಬಹುದೆಂಬ ಅಳುಕು. ಆ ಅಳುಕು, ಒತ್ತಡವನ್ನೂ ಮೀರಿ, ಬದುಕಿನ ಸವಿರುಚಿ ಹಿಡಿಯುವ ನಿರಾಳತೆ..!
ಆ ರುಚಿಯ ಬೆನ್ನುಬಿದ್ದ ಈ ಇಬ್ಬರನ್ನೂ ಮಾತಿಗೆ ತೊಡಗಿಸುವ 'ಕುಟ್ಟಿದೋಸೆ'!

   ಫೋನ್ ಮೂಲಕ, ಭಯಂಕರ ಜಗಳದೊಂದಿಗೆ ಶುರುವಾಗುವ ಅವರ ಸಂಭಾಷಣೆ, ಕೊನೆಗೆ ಕೇಕ್ ರೆಸಿಪಿ ಶೇರ್ ಮಾಡಿಕೊಳ್ಳುವ ಹೊತ್ತಿಗೆ, 'ಮಹಾಯುದ್ಧ ಮುಕ್ತಾಯವಾದದ್ದು ಪ್ರೇಮದೊಂದಿಗೆ' ಅನ್ನುವ, ಚರಿತ್ರೆಯ ಪುಟದ ಒಂದು ಕೊಟೇಶನ್ ಜೊತೆಗೆ ಇವರ ಪ್ರೇಮದ ಪುಟಗಳು ತೆರೆದುಕೊಳ್ಳುತ್ತವೆ..
ಮುಂದಿನದ್ದು ಒಂದು ಇಂಟರೆಸ್ಟಿಂಗ್ ಡ್ರಾಮ !

   ಕಾಡುಜನರ ನಾಟಿ ವೈದ್ಯನ 'ನಾಪತ್ತೆ ಪ್ರಕರಣ' ಮಾತ್ರ ನೋಡುಗನಲ್ಲಿ ಒಂದು ಕುತೂಹಲ ಹುಟ್ಟಿಸಲಿಕ್ಕಾಗಿಯಷ್ಟೆ ಸೇರಿಸಿದಹಾಗಿದೆ! ಆ ಸ್ಟೋರಿ ಲೈನ್ ಮತ್ತೆ ಮುಂದುವರಿಯುವುದೇ ಇಲ್ಲ.  ಆದರೂ, ತುಂಬಾ ಸೀರಿಯಸ್ ಅನಿಸಿಬಿಡಬಹುದಾದ ಸನ್ನಿವೇಶಗಳನ್ನು, ಚಾಟ್ ಸವಿದಷ್ಟೆ ಲೈವ್ಲಿಯಾಗಿಡುವ ಪಾತ್ರಗಳು.., ಈ ಬೆಂದು,ಹದಗೊಂಡ ಜೋಡಿಯ, ಬಾಯಿ ಸುಡುವಂಥ ತಳಮಳದ ಜೊತೆಜೊತೆಗೆ  ಐಸ್ ಕ್ರೀಂ ಥರದ ಒಂದು ಕೂಲ್ ಟೀನೇಜ್ ಪ್ರಣಯ.. ಮಸಾಲೆ, ಸಿಹಿ, ಒಗರು, ಸಣ್ಣ ಕಹಿ, ಹದವಾಗಿ ಬೆರೆತ ಹುಳಿ,.. ಒಟ್ಟಾರೆ, ಪ್ರತೀ ಸನ್ನಿವೇಶವನ್ನೂ ಚಪ್ಪರಿಸುತ್ತಲೇ ಇಡೀ ಸಿನಿಮಾ ಆಸ್ವಾದಿಸಿಬಿಡುವ ಪ್ರೇಕ್ಷಕನಲ್ಲಿ ಕೊನೆಗೆ ಉಳಿಯುವುದು - ಒಗ್ಗರಣೆಯ ಬೆಚ್ಚನೆಯ ಹಿತ ಮತ್ತು ಘಮಲು! ಆಹಾ ಎನಿಸುವ ಜಯಂತ್ ಕಾಯ್ಕಿಣಿಯವರ ಲಿರಿಕ್ಸ್, ಇಳಯರಾಜರ ಸಂಗೀತ ಒಗ್ಗರಣೆಯ ರುಚಿಯನ್ನು  ಮತ್ತಷ್ಟು ಹೆಚ್ಚಿಸಿವೆ !

  
   'ಒಗ್ಗರಣೆ' ಮಲಯಾಳದ 'ಸಾಲ್ಟ್ ಎನ್ ಪೆಪ್ಪರ್' ಸಿನಿಮಾದಿಂದ ಪ್ರೇರಿತವಂತೆ. ಕನ್ನಡ, ತಮಿಳು ಮತ್ತು ತೆಲುಗಿನಲ್ಲಿ ಒಟ್ಟಿಗೆ ನಿರ್ಮಾಣಗೊಂಡಿದೆ. ಬಹುಪಾಲು ಶೂಟಿಂಗ್ ಮೈಸೂರಿನಲ್ಲೇ ನಡೆದಿರುವುದು, ಅದರಲ್ಲೂ ಯೂನಿವರ್ಸಿಟಿ ಕ್ಯಾಂಪಸ್ಸಲ್ಲಿ ಅನ್ನೋದು ವಿಶೇಷ. ಇದರಿಂದ ನಂಗಂತೂ ಒಗ್ಗರಣೆ ನಮ್ಮನೆಯದ್ದೇ ಅನಿಸಿದೆ! ಅಂತೂ ಕನ್ನಡಕ್ಕೊಬ್ಬ expert ಬಾಣಸಿಗ ಸಿಕ್ಕ ಖುಶಿ! ನಮಗೆ ಮತ್ತೊಮ್ಮೆ ರುಚಿ ಕಟ್ಟಿಕೊಟ್ಟ ಪ್ರಕಾಶ್ ರೈ ಮತ್ತು ತಂಡಕ್ಕೆ ಅಭಿನಂದನೆಗಳು !!

   "ಈ ಜನುಮವೆ, ಆಹಾ ದೊರಕಿದೆ ರುಚಿ ಸವಿಯಲು..."

( ಈ ಮುಂದಿನ ಲಿಂಕ್ಸ್ ಕ್ಲಿಕ್ ಮಾಡಿ : )

"!http://youtu.be/_TIng5fHrBc

http://youtu.be/LrqY7c1U6Hw

Monday 24 March 2014

ಏಕಾಂತದ ತಲ್ಲಣದಲ್ಲಿ ತೇಲುವ ಹಾಯಿದೋಣಿ - 'ಕೋಯಾದ್'




   ಭೂಮಿ- ಆಕಾಶ- ಮನಸ್ಸು -ಎಲ್ಲವನ್ನೂ ಆವರಿಸಿಕೊಂಡಂತಿರುವ ನೀರು...ನಿರಂತರ ಹರಿವಿನ ನದಿಯ ಒಡಲಿನಿಂದಲೇ ಹುಟ್ಟುಪಡೆದಂತೆ ಅಲೆಗಳನ್ನು ತಬ್ಬಿ ತೊಡರುವ ಪುಟ್ಟ ಹಾಯಿದೋಣಿ... ಆ ದೋಣಿಯ ಮಗನಂತಿರುವ ಆತ..
ತನ್ನಪ್ಪನಿಂದ ಬಳುವಳಿಯಾಗಿ ಬಂದ ಆಸ್ತಿಯೆಂದರೆ ಈ ದೋಣಿಯೊಂದೆ. ಬಾಲ್ಯದಲ್ಲೆ ಅಮ್ಮನನ್ನು ಕಳೆದುಕೊಂಡವನಿಗೆ ಈ ನದಿಯ ಅಗಾಧತೆ ಮತ್ತು ದೋಣಿಯ ಮೈಸೆಳವು ಅಮ್ಮನ ಅಪ್ಪುಗೆಯಷ್ಟೇ ಆಪ್ತ.. ಇದು ಅಸ್ಸಾಮಿನ 'ಮಿಶಿಂಗ್' ಎಂಬ ಬುಡಕಟ್ಟು ಭಾಷೆಯ ಸಿನಿಮಾ  'ಕೋಯಾದ್' (ನಿರ್ದೇಶಕಿ : ಮಂಜು ಬೋರಾಹ್). ಮೊದಲು ಕೆಲಹೊತ್ತು ತಡವರಿಸುವ ನಿರೂಪಣೆ ನಿಧಾನವಾಗಿ ನದಿಯ ಹರಿವಿನೊಂದಿಗೆ ನಿಮ್ಮನ್ನೂ ಸೆಳೆದುಕೊಳ್ಳುತ್ತದೆ.

   ಮತ್ತೊಂದು ಮದುವೆಯ ಆತುರದಲ್ಲಿರುವ ಗಂಡನಿಂದ ದೂರಾಗಿ, ಮಗನೊಂದಿಗೆ ತನ್ನ ತವರಿಗೆ ಮರಳುವ ಅವಳು, ತನ್ನಷ್ಟಕ್ಕೆ ತಾನಿರಲು ಬಿಡದ ಜನರ ಕೊಳಕು ದಾಹಕ್ಕೆ ಬಲಿಯಾಗಿ ನದೀಪಾಲಾಗುತ್ತಾಳೆ. ಅವಳ ಒಬ್ಬನೇ ಮಗ ಪೌಕಾಮ್ ತನ್ನ ಮಲತಾಯಿಯ ನಿರ್ಲಕ್ಷ್ಯದ ನಡುವೆಯೇ ಮನಸುಕೊಟ್ಟು ಕಲಿತದ್ದೆಂದರೆ -  ನದಿಯಲ್ಲಿ ತೇಲಿಬರುವ ಕಟ್ಟಿಗೆಗಳನ್ನು ಸಂಗ್ರಹಿಸಿ ಮಾರಿ ಬದುಕುವುದು. ಅಪ್ಪನಿಂದ ಪಡೆದದ್ದೂ ಆ ದೋಣಿಯೊಂದನ್ನೆ. ಅಂತೆಯೆ ಅದೇ ಅವನ ಸರ್ವಸ್ವ.



   ಬಾಲ್ಯದಿಂದಲೇ ಮನುಷ್ಯ ಸಂಬಂಧಗಳ ಜಟಿಲತೆ, ಕುಟಿಲತೆಗಳ ಕಹಿಯನ್ನು ಕಂಡವನು ಅವನು. ಬಹುಷಃ ಅವನ ಪಾಲಿಗೆ ಒದಗಿಬಂದ ಒಂದೇ ನೆಮ್ಮದಿಯೆಂದರೆ, ಅವನ ಹೆಂಡತಿಯ ಪ್ರೀತಿ. ದುಡಿಮೆಯೊಂದನ್ನೆ ಗುರಿಯಾಗಿಸಿಕೊಂಡ ಪೌಕಾಮ್ ಗೆ ತನ್ನ ದೊಡ್ಡ ಮಗನನ್ನು ಡಾಕ್ಟರ್ ಮಾಡುವಾಸೆ. ಅದಕ್ಕಾಗಿ ಗಾಳಿ, ಮಳೆ, ಹಗಲು-ರಾತ್ರಿ ಎನ್ನದೆ ನದಿಯೊಡಲಲ್ಲಿ ತನ್ನ ದೋಣಿಯ ಜೊತೆ ತೇಲುತ್ತಾನೆ.. ಅವನೆಡೆಗೆ ತೇಲಿಬರುವ ಮರದ ದಿಮ್ಮಿಗಳೇ ಅವನ ಪಾಲಿನ ಖಜಾನೆ.

   ಅವನ ಮೈಮನಸ್ಸೆಲ್ಲವೂ ನದಿಯ ಅಗಾಧ ಹರಿವಿನಂತೆ ಮೌನ ಮತ್ತು ಗಂಭೀರ. ಇಡೀ ಚಿತ್ರದ ಮುಕ್ಕಾಲು ಪಾಲು ಇಂಥ ಗಂಭೀರ ಹರಿವಿನ ಜೊತೆಗೇ ಸಾಗುತ್ತದೆ. ಅವನಿಗೆ 'ಮಾತು' ಬರುವುದು ಅವನ ಆಳದ ಗಾಯಗಳು ಕಲಕಿ, ರಾಡಿಯಾದಾಗ ಮಾತ್ರ. ತಾನು ಅತಿಯಾಗಿ ನೆಚ್ಚಿದ ನಂಟಿನಿಂದಲೂ ನೆಮ್ಮದಿ ದೂರವೆನಿಸಿದಾಗ ಪೌಕಾಮ್ ಮಾತಾಡತೊಡಗುತ್ತಾನೆ. ಅದೂ ಚೀತ್ಕಾರ, ರೋದನೆಯ ದನಿಯಲ್ಲಿ ಹುಟ್ಟಿದ ಮಾತುಗಳು..



   ತಾನೇ ಒಂದು ನದಿಯಂತೆ ನಿರಂತರ ಹರಿಯುತ್ತ ಮುಕ್ಕಾಲು ಜೀವನ ಸವೆಸಿರುವ ಇವನು, ತನ್ನ ಕೊನೆಗಾಲದಲ್ಲಿ ನಿಮಿಷಮಾತ್ರ ಜೋರಾಗಿ ಉರಿದು ಆರಿಹೋಗುವ ಎಣ್ಣೆಬತ್ತಿದ ದೀಪದಂತೆ ಕಾಣುತ್ತಾನೆ. ಇಡೀ ಚಿತ್ರದ ತುಂಬ ಹರಡಿಕೊಂಡಿರುವ ಮಬ್ಬುಗತ್ತಲಿನಂಥ ಮೌನ ಕೊನೆಗೆ ಇವನ ಆರ್ತತೆಯ ಏಕಾಂತದಲ್ಲಿ ಕಪ್ಪಗೆ ಹೆಪ್ಪುಗಟ್ಟುತ್ತದೆ.. ನೋಡುಗನೊಳಗೆ ಆ ಆಕ್ರಂದದ ಅಲೆಗಳು ಹರಡಿಕೊಳ್ಳುತ್ತವೆ...

   ಮನುಷ್ಯ ಸಂಬಂಧಗಳ ಸಂಕೀರ್ಣತೆಯನ್ನು ಮಾರಕ ಯಾತನೆಯಂಥ ಮೌನದ ಹೊದಿಕೆಯಲ್ಲೇ ಅರ್ಥಮಾಡಿಸುತ್ತದೆ ಈ ಚಿತ್ರ. ಇಡೀ ಚಿತ್ರದ 'ಮೂಡ್' ಕಟ್ಟಿಕೊಡುವಲ್ಲಿ ಶ್ರಮಿಸಿರುವುದು ಇಲ್ಲಿನ ಸಿನಿಮಾಟೋಗ್ರಫಿ ಮತ್ತು ಹಿನ್ನೆಲೆ ಸಂಗೀತ. ಪೌಕಾಮ್ ನ ಒಳಹೊರಗನ್ನು ಅತ್ಯಂತ ಸಮರ್ಥವಾಗಿ ಚಿತ್ರಸಲಾಗಿದೆ. ಆದರೆ, ಕೊನೆಗೂ ನನ್ನಲ್ಲಿ ಉಳಿದ ಪ್ರಶ್ನೆಗಳು ಇವು : ಸಂಬಂಧಗಳ ಸ್ವಾರ್ಥ, ಜಾಳುತನದಿಂದ ಬೇಸತ್ತು ಬದುಕಿನ ಬಗೆಗೆ ಗಾಢ ನಿರಾಸೆ ತಳೆಯುವ ಪೌಕಾಮ್ ಗೆ ತನ್ನ ಹೆಂಡತಿಯ ಅಗಾಧ ಪ್ರೀತಿ ಯಾಕೆ ಆಸರೆಯೆನಿಸಲಿಲ್ಲ? ತನ್ನ ಗಂಡನನ್ನು ತನಗಿಂತಲೂ ಹೆಚ್ಚು ನೆಚ್ಚಿಕೊಂಡವಳ ಪ್ರೀತಿ, ಕಾಳಜಿ ಯಾಕೆ ಅವನಿಗೆ ಬದುಕಿನ ಏಕೈಕ ಸೌಂದರ್ಯದಂತೆ ಭಾಸವಾಗಲಿಲ್ಲ? ಹೆಂಡತಿಯ ಅಸ್ತಿತ್ವ ಕೇವಲ ಭೌತಿಕ ನೆಲೆಯದ್ದಾಗಿ ಮಾತ್ರ ಉಳಿದುಬಿಟ್ಟಿದ್ದು ಯಾಕೆ? ...

   ಇದು 'ಭಾರತೀಯ ರಿವಾಜು'ಗಳನ್ನು ಹೊದ್ದುಕೊಂಡ ಗಂಡಸಿನ ಮನಸ್ಥಿತಿಯಂತೆ ಕಾಣುತ್ತದೆ. ತನ್ನ ತಾಯಿಯ ದುರದೃಷ್ಟಕರ ಹಣೆಬರಹ ಕಂಡಿದ್ದವನಿಗೆ ತನ್ನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಹೆಂಡತಿ ಯಾಕೆ ಆತ್ಮಸಖಿಯಾಗಲಿಲ್ಲ? ಇದು ನನ್ನ ಮಟ್ಟಿಗೆ ಆದರ್ಶದ ಕನವರಿಕೆಯೂ ಇರಬಹುದೇನೊ!

   ಯಾಕೋ  ಅವನ ಏಕಾಂತದ ತಲ್ಲಣಗಳ ಸುಳಿಯಲ್ಲಿ ಅವಳ ಪ್ರೀತಿಯ ದೋಣಿ ಒಂಟಿಯಾದಂತೆ ನನಗನಿಸಿತು.